Tengina Kayi mattu Balehannu
ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ಮಹತ್ವ
ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ. ತೆಂಗಿನಕಾಯಿ, ಬಾಳೆಹಣ್ಣು , ಹೂವು ತೆಗೆದುಕೊಂಡು ಹೋಗುವರು. ದೇವರಿಗೆ ತೆಂಗಿನಕಾಯಿ, ಬಾಳೆಹಣ್ಣನ್ನೇ ಏಕೆ ಅರ್ಪಿಸಬೇಕೆಂದರೆ ಇವೆರಡೂ ಪವಿತ್ರ ಫಲಗಳು.
ಭೂಮಿಯಲ್ಲಿ ಬೆಳೆಯುವ ಎಲ್ಲಾ ಗಿಡದ ಹಣ್ಣುಗಳನ್ನು ಪಶು, ಪಕ್ಷಿಗಳು ತಿಂದು ಹಿಕ್ಕೆ ಹಾಕುತ್ತವೆ. ಆ ಹಿಕ್ಕೆಯಲ್ಲಿ ಬೀಜಗಳೂ ಇರುತ್ತವೆ. ಮಾನವನೂ ಹಣ್ಣುಗಳನ್ನು ತಿಂದು ಬೀಜವನ್ನು ಎಸೆಯುತ್ತಾನೆ. ಆ ಬೀಜದಿಂದ ಬೆಳೆದ ಗಿಡ ಮರಗಳು ಎಂಜಲಿನಿಂದ ಬೆಳೆದಂತೆ ಆಯಿತು. ಆಗ ಆ ಫಲಗಳು ಪವಿತ್ರವಾಗುವುದಿಲ್ಲ. ಆದ್ದರಿಂದ ದೇವರಿಗೆ ಇಂಥ ಫಲಗಳು ಪೂಜೆಯ ಹೆಸರಿನಲ್ಲಿ ಸಮರ್ಪಿಸಿ ನೈವೇದ್ಯ ಮಾಡುವುದು ಶ್ರೇಷ್ಠವಲ್ಲ.
ತೆಂಗಿನಕಾಯಿ ಹಾಗೂ ಬಾಳೆಹಣ್ಣು ಈ ವರ್ಗಕ್ಕೆ ಸೇರದೇ ಇರುವ ಪವಿತ್ರ ಫಲಗಳು. .. ತೆಂಗಿನಕಾಯಿಯನ್ನು ಸಿಪ್ಪೆ ಸಹಿತ ಅಥವಾ ಒಂದು ತಿಂಗಳು ನೀರಿನ ಕುಂಭದಲ್ಲಿಟ್ಟು ಭೂಮಿಯಲ್ಲಿ ಹೂತರೆ ಅದು ಮರವಾಗಿ ಬೆಳೆಯುತ್ತದೆ. ಆಗ ಎಂಜಲು ಇದಕ್ಕೆ ಅನ್ವಯಿಸುವುದಿಲ್ಲ.
ಬಾಳೆಹಣ್ಣು
ಬಾಳೆಹಣ್ಣು ಯಾವಾಗಲೂ ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ ಹಾಗೂ ಕಂದಿನಿಂದ ಚಿಗುರಿ ಗಿಡವಾಗಿ ಬಾಳೆ ಫಲ ನೀಡುತ್ತದೆ. ಅಲ್ಲದೆ ಒಮ್ಮೆ ಫಲ ಬಿಟ್ಟ ನಂತರ ತನ್ನ ಆಯುಸ್ಸು ಮುಗಿಸುತ್ತದೆ.
ಬಾಳೆ ತನ್ನ ಆಯುಸ್ಸು ಮುಗಿಸುವ ಮೊದಲು ಕಂದುಗಳನ್ನು ಮಾಡಿ ಸಸಿಗಳನ್ನು ಬೆಳೆಸುತ್ತದೆ. ಬಾಳೆಹಣ್ಣು ಸಹ ಎಂಜಲಾಗದ ಫಲವಾಗಿದೆ. ಈ ಕಾರಣಕ್ಕಾಗಿ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಅತಿಶ್ರೇಷ್ಠವಾಗಿದೆ.
Comments
Post a Comment